ಹೈಕಮಾಂಡ್ ಆಫರ್ ಕೊಟ್ರು ಕೆಪಿಸಿಸಿ ಪಟ್ಟ ಬಿಟ್ಟಿದ್ಯಾಕೆ ಸಚಿವ ಸತೀಶ್ ಜಾರಕಿಹೊಳಿ?
ಕಾಂಗ್ರೆಸ್ ಹೈಕಮಾಂಡ್ನಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ನೀಡಿದರೂ ಸಚಿವ ಸ್ಥಾನ ಕೈ ತಪ್ಪಿದರೆ ಬೆಳಗಾವಿ ರಾಜಕೀಯದ ಮೇಲಿನ ಹತೋಟಿ ತಪ್ಪುತ್ತದೆ ಎಂಬ ಕಾರಣಕ್ಕೆ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಹುದ್ದೆ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ ಸಚಿವ ಸ್ಥಾನಕ್ಕೂ ಪಟ್ಟು ಹಿಡಿದಿದ್ದರು. ತನ್ಮೂಲಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು.
ಮಂಗಳವಾರ ನಡೆದ ಮಾತುಕತೆಯ ವೇಳೆಯೂ ಕೆಪಿಸಿಸಿ ಕಚೇರಿ ನಿರ್ವಹಿಸಲು ಪ್ರತಿ ತಿಂಗಳು 2-3 ಕೋಟಿ ರು. ಖರ್ಚಾಗುತ್ತದೆ. ಖರ್ಚು ನಿಭಾಯಿಸುವುದು ನನಗೆ ಸಮಸ್ಯೆಯಲ್ಲ. ಆದರೆ, ಬೆಳಗಾವಿ ರಾಜಕಾರಣದ ಮೇಲಿನ ಹಿಡಿತ ತಪ್ಪಬಾರದು ಎಂಬ ಕಾರಣಕ್ಕೆ ನನಗೆ ಸಚಿವ ಸ್ಥಾನ ಬೇಕು ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಸಚಿವ ಸ್ಥಾನದ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಪಟ್ಟ ತಪ್ಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಪಟ್ಟಕ್ಕಿಂತ ಬೆಳಗಾವಿ ರಾಜಕೀಯದ ಮೇಲಿನ ಹಿಡಿತವನ್ನೇ ಆದ್ಯತೆಯಾಗಿ ಸ್ವೀಕರಿಸಿದರು ಎಂಬ ಮಾತು ಕೇಳಿ ಬಂದಿದೆ. ಇದೀಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಯಾವ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.