ರೈತ ತರಬೇತಿ, ಶೇಂಗಾ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ ನಿರ್ಮಲಾ ಸೀತಾರಾಮನ್
ಯಾದಗಿರಿ: ತಾಲ್ಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ಕೃಷಿ ಸಂಸ್ಕರಣೆಗಾಗಿ (ಶೇಂಗಾ ಸಂಸ್ಕರಣಾ ಘಟಕ) ರೈತ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು (ಸಿಎಫ್ಸಿ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಉದ್ಘಾಟನೆ ಮಾಡಿದರು.
ಬದ್ದೇಪಲ್ಲಿ ಗ್ರಾಮದಲ್ಲಿ ₹ 2.19 ಕೋಟಿ ವೆಚ್ಚದ ಸಿಎಫ್ಸಿ ನಿರ್ಮಾಣ ಮಾಡಲಾಗಿದ್ದು, ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ (ಎಂಪಿಎಲ್ಎಡಿಎಸ್) ₹ 50 ಲಕ್ಷ ಹಾಗೂ ಉಳಿದ ಹಣವನ್ನು ನಬಾರ್ಡ್ ಸಹಾಯಧನದ ರೂಪದಲ್ಲಿ ನೀಡಿದೆ. ನಿರ್ಮಲಾ ಸೀತಾರಾಮನ್ ಅವರು ಶೇಂಗಾ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿ, ಇಡೀ ಘಟಕವನ್ನು ವೀಕ್ಷಣೆ ಮಾಡಿದರು. ಘಟಕದಲ್ಲಿನ ಶೇಂಗಾ ಸಂಸ್ಕರಣೆಯ ವಿಧಾನ, ಪ್ರಯೋಗಾಲಯ, ಪ್ಯಾಕೇಜ್ ಮಾಡಲಾದ ಉತ್ಪನ್ನಗಳನ್ನು ವೀಕ್ಷಿಸಿ ಅಧಿಕಾರಿಗಳು, ಘಟಕದ ಸಿಬ್ಬಂದಿಯಿಂದ ಮಾಹಿತಿಯನ್ನು ಪಡೆದುಕೊಂಡರು. ಕೃಷಿ ಉತ್ಪನ್ನಗಳ, ಮಹಿಳಾ ಸ್ವಸಹಾಯ ಸಂಘಗಳ ಮಳಿಗೆಗಳಿಗೂ ತೆರಳಿ ಅಲ್ಲಿನ ಉತ್ಪನ್ನಗಳ ಬಗ್ಗೆ ತಿಳಿದುಕೊಂಡು ಮಾರಾಟದ ಕುರಿತು ಮಾತನಾಡಿದರು. ಸಂಸ್ಕರಣಾ ಘಟಕದ ಸಿಬ್ಬಂದಿ, ರೈತರು, ರೈತ ಮುಖಂಡರು ಸಚಿವರೊಂದಿಗೆ ಫೋಟೋಗಳನ್ನು ತೆಗೆಯಿಸಿಕೊಂಡರು.