Satish Jarkiholi: ಕೆಪಿಸಿಸಿ ಅಧ್ಯಕ್ಷ ಪಟ್ಟ ಕೈ ತಪ್ಪಿದ್ದಲ್ಲ ಎಂದ ಸಾಹುಕಾರ್, 2028ಕ್ಕೆ ಮುಖ್ಯಮಂತ್ರಿ ಆಗ್ತಾರಾ? ಜಾರಕಿಹೊಳಿ ಸ್ಪೋಟಕ ಹೇಳಿಕೆ
ಬೆಂಗಳೂರು (ಜೂ.04): ಅಂತೂ-ಇಂತೂ ಕಾಂಗ್ರೆಸ್ನಲ್ಲಿ (Congress) ನಾಯಕತ್ವ ಬದಲಾಯ್ತು. ಡಿಕೆ ಶಿವಕುಮಾರ್ ಅವರ ಸಿಎಂ ಆಸೆ ಕೂಡ ಈಡೇರಿತು. ಆದ್ರೆ ಹಲವು ವರ್ಷಗಳಿಂದಲೇ ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ (Satish Jarakiholi) ಕನಸು ಮಾತ್ರ ನನಸಾಗಲಿಲ್ಲ. ಕಾರಣ ಏನು? ಸಾಹುಕಾರ್ ಲೆಕ್ಕಾಚಾರ ತಪ್ಪಿದ್ದು ಎಲ್ಲಿ? ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಸತೀಶ್ ಜಾರಕಿಹೊಳಿ.
ಜಾರಕಿಹೊಳಿಗೆ ಮತ್ತೆ ಸಿಗುತ್ತಾ 'ಲೋಕೋಪಯೋಗಿ'? ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗ್ತಿದ್ದು, ಇತ್ತ ಬೆಂಗಳೂರಲ್ಲಿ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವೇಳೆ ಮಾತಾಡಿದ ಜಾರಕಿಹೊಳಿ, ಈಗಾಗಲೇ ಮೂರು ವರ್ಷ ಲೋಕೋಪಯೋಗಿ ಖಾತೆಯಲ್ಲಿ ಕೆಲಸ ಮಾಡಿದ್ದೇನೆ. ಈಗ ಖಾತೆ ಹಂಚಿಕೆ ಬಗ್ಗೆ ಸಿಎಂ ಏನು ಮಾಡ್ತಾರೆ ನೋಡೋಣ ಎಂದ್ರು. ಅಲ್ಲದೇ ನನಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದು ಅಲ್ಲ ಎಂದಿದ್ದಾರೆ. 'ಕೆಪಿಸಿಸಿ ಸ್ಥಾನ ಕೈ ತಪ್ಪಿದ್ದಲ್ಲ' ನನಗೆ ಕೆಪಿಸಿಸಿ ಸ್ಥಾನ ಕೈ ತಪ್ಪಿದ್ದಲ್ಲ, ಹೈಕಮಾಂಡ್ ನಾಯಕರು ಒನ್ ಮ್ಯಾನ್ ಒನ್ ಪೋಸ್ಟ್ ಅಷ್ಟೇ ಅನ್ನೋ ಮಾತನ್ನ ಎರಡು ತಿಂಗಳಿಂದ ಹೇಳ್ತಿದ್ದಾರೆ. ಡಿಕೆಶಿ ಅವರು ಬಂದಾಗ ಕಾರಣಗಳು ಇದ್ವು. ಮಂತ್ರಿ ಆಗಿಲ್ಲ ಅಂದ್ರೆ ಕೆಪಿಸಿಸಿ ಅಧ್ಯಕ್ಷ ಆಗ್ತಿದ್ದೆ. ನನಗೆ ಮಂತ್ರಿ ಸ್ಥಾನವೂ ಬೇಕಿತ್ತು ಎಂದು ಜಾರಕಿಹೊಳಿ ಅವರು ಸ್ಪಷ್ಟನೆ ನೀಡೋ ಪ್ರಯತ್ನ ಮಾಡಿದ್ದಾರೆ.
'ನಾನು ಸಿಎಂ ಕಾಂಪಿಟೇಟರ್ ಅಂತ ತೋರಿಸಲು ಅಲ್ಲ' ನಾನು ಏನು ಸಿಎಂ ಕಾಂಪಿಟೇಟರ್ ಅನ್ನೋದ್ದನ್ನ ತೋರಿಸಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿಲ್ಲ. ಸಿದ್ದರಾಮಯ್ಯ ಸಿಎಂ ಆಗೋಕೆ ಈ ಹಿಂದೆ ಅಧ್ಯಕ್ಷರಾಗಿದ್ರಾ? ಸಿಎಂ ಆಗೋಕೆ ಅಧ್ಯಕ್ಷರೇ ಆಗಬೇಕು ಅಂತೇನಿಲ್ಲ. ನನಗೆ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನ ಎರಡೂ ಬೇಕು ಅಂತ ಹೇಳಿದ್ದೆ ಎಂದ ಜಾರಕಿಹೊಳಿ ನಾನು ಮನಸ್ಸು ಮಾಡಿದ್ರೆ ಕೆಪಿಸಿಸಿ ಅಧ್ಯಕ್ಷನಾಗ್ತಿದ್ದೆ ಎನ್ನುವಂತೆ ಮಾತಾಡಿದ್ದಾರೆ. 2028ಕ್ಕೆ ಸಿಎಂ ಆಗ್ತಾರಾ ಸಾಹುಕಾರ್? ಕೆಪಿಸಿಸಿ ಸ್ಥಾನ ಕೈ ತಪ್ಪಿತು, ಮುಂದೆ 2028ಕ್ಕೆ ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆ ಉತ್ತರಿಸಿ ಸತೀಶ್ ಜಾರಕಿಹೊಳಿ ಅವ್ರು, ನೋಡೋಣ ಇನ್ನೂ ಎರಡು ವರ್ಷಗಳು ಇದೆ. ಬಿಕೆ ಹರಿಪ್ರಸಾದ್ ಮುಂದೆ ಸಿಎಂ ಯಾಕ್ ಆಗಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.