ಯಾವುದೇ ಹುದ್ದೆ ಕೇಳಿಲ್ಲ, ನಾನು ಯಾವತ್ತೂ ಹೈಕಮಾಂಡ್ ಮಾತು ಮೀರಿದವನಲ್ಲ: ಯು.ಟಿ.ಖಾದರ್
ಮಂಗಳೂರು: ನಾನು ಯಾವತ್ತೂ ಹೈಕಮಾಂಡ್ ಮಾತು ಮೀರಿದವನಲ್ಲ. ನಮ್ಮೆಲ್ಲ ಹಿತಾಸಕ್ತಿಗಿಂತ ಪಕ್ಷ ಮುಖ್ಯ. ಅದಕ್ಕಿಂತ ಮೊದಲು ನಮಗೆ ದೇಶ ಮುಖ್ಯ. ಸದ್ಯಕ್ಕೆ ನನಗೆ ಪಕ್ಷ ಇಲ್ಲ. ನಾನಂತೂ ಯಾವುದೇ ಹುದ್ದೆ ಕೇಳಿಲ್ಲ. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮೂರು ವರ್ಷ ವಿಧಾನಸಭಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದೇನೆ. ಪಕ್ಷದೊಳಗೆ ಏನೆಲ್ಲ ಬೆಳವಣಿಗೆ ನಡೆದಿದೆ ಎಂದು ನನಗೆ ಗೊತ್ತಿಲ್ಲ. ಈಗ ನಾನು ವಿಧಾನಸಭಾಧ್ಯಕ್ಷ ಆಗಿದ್ದೇನೆ, ಸರ್ಕಾರ ಅಧಿವೇಶನ ಮಾಡಲು ಹೇಳಿದಾಗ ಮಾಡುವುದಷ್ಟೇ ಸದ್ಯದ ಕೆಲಸ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಸಾಮಾಜಿಕ ಜಾಲತಾಣ ನೋಡಿ ಅಧಿಕಾರ ನೀಡಲ್ಲ: ಉಪಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರು ಹರಿದಾಡಿದ ಕುರಿತು ಇಲ್ಲಿ ಸುದ್ದಿಗಾರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನನಗೆ ಆ ವಿಚಾರ ಗೊತ್ತಿಲ್ಲ. ಸದ್ಯಕ್ಕೆ ನಾನು ವಿಧಾನಸಭಾಧ್ಯಕ್ಷನಾಗಿದ್ದೇನೆ. ಸರ್ಕಾರ ಸೂಚಿಸಿದಾಗ ವಿಧಾನಸಭಾ ಅಧಿವೇಶನಕ್ಕೆ ಏರ್ಪಾಟು ಮಾಡುವುದು ನನ್ನ ಕೆಲಸ. ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ.
ಸಾಮಾಜಿಕ ಜಾಲತಾಣ ನೋಡಿ ಯಾರೂ ಅಧಿಕಾರ ನೀಡುವುದಿಲ್ಲ. ಕಾರ್ಯನಿರ್ವಹಣೆಯನ್ನು ನೋಡಿ ಅಧಿಕಾರ ಕೊಡುತ್ತಾರೆ. ನನಗೆ ಏನು ಹುದ್ದೆ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು. ‘ಶಾಸಕನಾಗಿದ್ದಾಗ ಸದನವೀರ ಪ್ರಶಸ್ತಿ ಬಂತು. ಆರೋಗ್ಯ ಸಚಿವನಾಗಿ ರಾಷ್ಟ್ರೀಯ ಪ್ರಶಸ್ತಿ ಬಂತು. ನಗರಾಭಿವೃದ್ಧಿ ಹಾಗೂ ವಸತಿ ಸಚಿವನಾಗಿ ಮಾಡಿದ ಸಾಧನೆ ನೋಡಿ ನನ್ನನ್ನು ಸದನದ ಉಪನಾಯಕನನ್ನಾಗಿ ನೇಮಿಸಿದರು. ಅದರ ನಿರ್ವಹಣೆ ನೋಡಿ ನನ್ನನ್ನು ವಿಧಾನಸಭಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದರು. ಪಕ್ಷವು ನನ್ನ ಮೇಲೆ ವಿಶ್ವಾಸ ಇಟ್ಟು ವಿಧಾನಸಭಾಧ್ಯಕ್ಷ ಆಗುವಂತೆ ಸೂಚಿಸಿದಾಗ ಅದಕ್ಕೂ ಒಪ್ಪಿದ್ದೆ, ಪಕ್ಷ ನೀಡಿದ ಎಲ್ಲ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ಸ್ಪೀಕರ್ ಸ್ಥಾನದಲ್ಲಿ ಕುಳಿತ ಬಳಿಕ ಪಕ್ಷ ರಹಿತವಾಗಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ’ ಎಂದು ಹೇಳಿದರು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದೆ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ, ‘ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ವಿಡಿಯೊ ಗೇಮ್, ಸ್ಕಿಲ್ ಗೇಮ್, ಹುಕ್ಕಾಬಾರ್ ನಿಷೇಧಿಸಿ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದೇನೆ. ಸ್ಯಾಂಡ್ ಬಜಾರ್ ಆ್ಯಪ್ ಜಾರಿಗೊಳಿಸಿದ್ದೆ. ಇನ್ನೂ ಉತ್ತಮ ಕೆಲಸ ಮಾಡುವರು ಯಾರಾದರೂ ಇದ್ದರೆ ಅವರನ್ನೇ ಮಾಡಲಿ’ ಎಂದರು. ‘ನಾನು ದೆಹಲಿಗೆ ಹೋಗುವುದಿಲ್ಲ. ಕ್ಷೇತ್ರದ ಜನರು ಕೂಡ ನನಗೆ ಮುಖ್ಯ. ಜಾತಿ ಹಾಗೂ ಧರ್ಮ ಒಂದು ಗೌರವ ಮಾತ್ರ. ಯಾವುದೇ ಸ್ಥಾನವನ್ನು ಅಲಂಕರಿಸಿದರೂ ಪಕ್ಷದ ತತ್ವ ಸಿದ್ಧಾಂತದಡಿ ಕೆಲಸ ಮಾಡಬೇಕು. ದೇಶದ ಸಂವಿಧಾನದ ವ್ಯಾಪ್ತಿಯಲ್ಲಿ ಕೆಲಸ ಮಾಡುವುದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ’ ಎಂದರು.