ತೆಲಂಗಾಣ ಸಂಸ್ಥಾಪನಾ ದಿನ: ರಾಜ್ಯದ ಜನರಿಗೆ ಪ್ರಧಾನಿ ಮೋದಿ, ಸಿಎಂ ರೆಡ್ಡಿ ಶುಭಾಶಯ
ನವದೆಹಲಿ: ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ತೆಲಂಗಾಣ ಜನರಿಗೆ ಶುಭ ಕೋರಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ರಾಜ್ಯದ ಜನರಿಗೆ ಶುಭಾಶಯ ಹೇಳಿರುವ ಮೋದಿ, ‘ತೆಲಂಗಾಣದ ಜನರು ಸೃಜನಶೀಲತೆ ಮತ್ತು ವ್ಯವಹಾರಿಕ ಚುರುಕುತನಕ್ಕೆ ಹೆಸರುವಾಸಿ. ರಾಜ್ಯವು ಧೈರ್ಯ, ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವದ ಸಂಕೇತವಾಗಿ ಶ್ರೇಷ್ಠ ಇತಿಹಾಸ ಮತ್ತು ಅದ್ಭುತ ಪರಂಪರೆಯನ್ನು ಹೊಂದಿದೆ’ ಎಂದು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ನಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತೆಲಂಗಾಣದ ಅಭಿವೃದ್ಧಿ ಆಂದೋಲನಕ್ಕೆ ಸಂಪೂರ್ಣ ಸಹಕಾರ ನೀಡಲು ಕೇಂದ್ರ ಸರ್ಕಾರ ಬದ್ಧ. ತೆಲಂಗಾಣದ ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುವೆ’ ಎಂದು ಬರೆದುಕೊಂಡಿದ್ದಾರೆ.