Select Location
All Locations
State
Region
City / District
ಮಹಾರಾಷ್ಟ್ರ: 'ಲಡ್ಕಿ ಬಹೀನ್‌’ ಯೋಜನೆಯಲ್ಲಿ 80 ಲಕ್ಷ ಮಹಿಳೆಯರು ಅನರ್ಹ

ಮಹಾರಾಷ್ಟ್ರ: 'ಲಡ್ಕಿ ಬಹೀನ್‌’ ಯೋಜನೆಯಲ್ಲಿ 80 ಲಕ್ಷ ಮಹಿಳೆಯರು ಅನರ್ಹ

ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಮಹತ್ವದ ಯೋಜನೆಯಾದ 'ಮುಖ್ಯಮಂತ್ರಿ ಮಾಜ್ಹಿ ಲಡ್ಕಿ ಬಹೀನ್‌’ಯಿಂದ ಸುಮಾರು 80 ಲಕ್ಷ ಮಹಿಳೆಯರನ್ನು ಈ ಲಡ್ಕಿ ಬಹೀನ್‌ ಯೋಜನೆಯಿಂದ ಕೈಬಿಟ್ಟಿರುವುದು ಈಗ ಆಡಳಿತಾರೂಢ ಮಹಾಯುತಿ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೂ ಕಾರಣವಾಗಿದೆ. 2024ರಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಮಹಾಯುತಿ ಮೈತ್ರಿಕೂಟವು ಮಹಿಳೆಯರ ಮತಗಳ ಸೆಳೆಯಲು ಲಡ್ಕಿ ಬಹೀನ್‌ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ ಅರ್ಹತೆ ಪಡೆದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹1,500 ಜಮೆ ಮಾಡಲಾಗುತ್ತಿತ್ತು. ಇತ್ತೀಚೆಗೆ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಲು ಇ–ಕೆವೈಸಿ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿತ್ತು. ಇ-ಕೆವೈಸಿ ಪೂರ್ಣಗೊಳಿಸದ ಕಾರಣಕ್ಕಾಗಿ 80 ಲಕ್ಷ ಮಹಿಳೆಯರನ್ನು ಅನರ್ಹರೆಂದು ಘೋಷಿಸಿತ್ತು. ಇ-ಕೆವೈಸಿಗೆ ಎಂಟು ತಿಂಗಳ ಅವಧಿ ಇತ್ತು: ಈ ಬಗ್ಗೆ ಸೋಮವಾರ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಏ.30ರಂದು ಇ-ಕೆವೈಸಿ ಗಡುವು ಮುಗಿದಿದ್ದು, 2.4 ಕೋಟಿ ಇದ್ದ ಮಹಿಳಾ ಫಲಾನುಭವಿಗಳ ಸಂಖ್ಯೆ ಇದೀಗ 1.7 ಕೋಟಿಗೆ ಇಳಿದಿದೆ. 

ಈ ಅನರ್ಹತೆಗೆ ಅರ್ಹತಾ ಮಾನದಂಡಗಳನ್ನು ಪೂರೈಸದಿರುವುದು ಸಹ ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ಎಂಟು ತಿಂಗಳ ಕಾಲಾವಕಾಶ ನೀಡಿತ್ತು ಎಂದು ತಿಳಿಸಿದ್ದಾರೆ. ಸುಮಾರು 50 ರಿಂದ 55 ಲಕ್ಷ ಮಹಿಳೆಯರು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಸುಮಾರು 12 ಲಕ್ಷ ಮಹಿಳೆಯರು ₹2.5 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು ಮೀರಿ ಆದಾಯ ತೆರಿಗೆ ಪಾವತಿದಾರರಾಗಿರುವುದು ಕಂಡು ಬಂದಿದೆ. 4.5 ಲಕ್ಷಕ್ಕೂ ಹೆಚ್ಚು ಮಹಿಳೆಯರು 65 ವರ್ಷಗಳ ಗರಿಷ್ಠ ವಯೋಮಿತಿಯನ್ನು ಮೀರಿದ್ದು, ಸುಮಾರು ಐದು ಲಕ್ಷ ಮಹಿಳೆಯರು ಈಗಾಗಲೇ ನಮೋ ಶೇತ್ಕರಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇ-ಕೆವೈಸಿ ಪೂರ್ಣಗೊಳಿಸಿದ ಮಹಿಳೆಯರಿಗೂ ಮಾಸಿಕ ಕಂತು ಜಮೆಯಾಗುತ್ತಿಲ್ಲ ಎಂಬ ದೂರುಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಿಜವಾದ ಫಲಾನುಭವಿಗಳ ಅಂತಿಮ ಅಂಕಿ-ಅಂಶಗಳು ಒಂದು ವಾರದಲ್ಲಿ ಸ್ಪಷ್ಟವಾಗಲಿವೆ ಮತ್ತು ದೂರುಗಳನ್ನು ಮರು ಪರಿಶೀಲನೆ ಮಾಡಲಾಗುತ್ತಿದೆʼ ಎಂದು ಹೇಳಿದರು. 

ವಿಪಕ್ಷಗಳ ಆಕ್ರೋಶ: ರಾಜ್ಯ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಆ ಕಾರಣಕ್ಕೆ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡುತ್ತಿದೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಜಯಂತ್ ಪಾಟೀಲ್ ಆರೋಪಿಸಿದ್ದಾರೆ. ಈಗ ಸುಮಾರು 80 ಲಕ್ಷ ಮಹಿಳೆಯರನ್ನು ಅನರ್ಹರೆಂದು ಘೋಷಿಸಲಾಗಿದೆ. ಸಹಾಯದ ಭರವಸೆ ನೀಡಿದ್ದ ಸರ್ಕಾರ ಈಗ ಜನರಿಗೆ ಮೋಸ ಮಾಡಿದೆ. ಈ ಕ್ರಮವು ರಾಜ್ಯ ಸರ್ಕಾರದ ಮೇಲಿನ ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ಸೂಚಿಸುತ್ತದೆ. ಕೇಂದ್ರದ ನಂತರ ರಾಜ್ಯವೂ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಮೊದಲ ಹೊಡೆತ ನಮ್ಮ 'ಲಡ್ಕಿ ಬಹೀನ್' (ಪ್ರೀತಿಯ ಸಹೋದರಿಯರ) ಮೇಲೆ ಬಿದ್ದಿದೆ’ ಎಂದು ಕಿಡಿಕಾರಿದ್ದಾರೆ. ಸರ್ಕಾರದ ವೈಫಲ್ಯವಲ್ಲವೇ? ಈ ಅಭಿಪ್ರಾಯಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿರುವ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಕೆವೈಸಿ ಕೇವಲ ಒಂದು ನೆಪವಾಗಿದ್ದು, ಫಲಾನುಭವಿಗಳನ್ನು ಹಂತ-ಹಂತವಾಗಿ ತೆಗೆದುಹಾಕಿ ಅಂತಿಮವಾಗಿ ಯೋಜನೆಯನ್ನು ಮುಚ್ಚುವುದೇ ನಿಜವಾದ ಉದ್ದೇಶವಾಗಿದೆ. ಸರ್ಕಾರವು ಈಗ ಈ ಮಹಿಳೆಯರನ್ನು ನಕಲಿ ಫಲಾನುಭವಿಗಳು ಎಂದು ಕರೆಯುತ್ತಿದೆ. 

ಚುನಾವಣೆಗೆ ಮುನ್ನ ಸೂಕ್ತ ಕೆವೈಸಿ ಪರಿಶೀಲನೆ ಇಲ್ಲದೆ ಯೋಜನೆಯನ್ನು ಜಾರಿಗೊಳಿಸಿದ್ದು ಸರ್ಕಾರದ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಮಾತನಾಡಿ, ದೇವೇಂದ್ರ ಫಡ್ನವೀಸ್‌ ನೇತೃತ್ವದ ಸರ್ಕಾರವು ಬೋಗಸ್ ಯೋಜನೆಗಳನ್ನು ನಡೆಸುತ್ತಿದೆ. ಮಹಿಳೆಯರಿಗೆ ನೀಡುವ ಮಾಸಿಕ ಭತ್ಯೆಯನ್ನು ಹೆಚ್ಚಿಸುವುದಾಗಿ ಸರ್ಕಾರ ಆರಂಭದಲ್ಲಿ ಹೇಳಿತ್ತು. ಆದರೆ ಅದಕ್ಕೆ ಬದಲಾಗಿ 80 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಅನರ್ಹರೆಂದು ಘೋಷಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ವೈಫಲ್ಯ: ಸುಪ್ರಿಯಾ ಸುಳೆ ಕಿಡಿ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಮಾತನಾಡಿ, ಫಲಾನುಭವಿಗಳ ಸೂಕ್ತ ಪರಿಶೀಲನೆ ನಡೆಸದೆ ಚುನಾವಣಾ ಅವಧಿಯಲ್ಲಿ ತರಾತುರಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು ಎಂದು ಟೀಕಿಸಿದ್ದಾರೆ. 

‘ಸುಮಾರು ಒಂದೂವರೆ ವರ್ಷಗಳ ನಂತರ 80 ಲಕ್ಷ ಮಹಿಳೆಯರು ಅನರ್ಹರು ಎಂಬುದು ಸರ್ಕಾರಕ್ಕೆ ಅರಿವಾಗಿರುವುದು ಆಶ್ಚರ್ಯ ತಂದಿದೆ. ಇದು ರಾಜಕೀಯ, ಆಡಳಿತಾತ್ಮಕ ಮತ್ತು ಅನುಷ್ಠಾನದ ಮಟ್ಟದಲ್ಲಿ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಈ ಯೋಜನೆಗೆ ತೆರಿಗೆದಾರರ ಹಣದಿಂದ ಧನಸಹಾಯ ನೀಡಲಾಗುತ್ತದೆ. ಅಂದರೆ ಸರ್ಕಾರವು ಕಳೆದ ಒಂದೂವರೆ ವರ್ಷಗಳಿಂದ ಅನರ್ಹ ಫಲಾನುಭವಿಗಳಿಗೆ ಸಾರ್ವಜನಿಕ ಹಣವನ್ನು ವಿತರಿಸುತ್ತಿತ್ತೇ?’ ಎಂದು ಪ್ರಶ್ನಿಸಿದ್ದಾರೆ. ‘ಬಾಧಿತ ಮಹಿಳೆಯರ ಸಂಖ್ಯೆ ತುಂಬಾ ದೊಡ್ಡದಾಗಿದೆ. ಮಹಾರಾಷ್ಟ್ರದ ಪ್ರತಿಯೊಬ್ಬ ಅರ್ಹ ಮಹಿಳೆಯೂ ಯೋಜನೆಯ ಪ್ರಯೋಜನಗಳನ್ನು ನಿಯಮಿತವಾಗಿ ಪಡೆಯುವುದನ್ನು ಮುಂದುವರಿಸಬೇಕು ಎಂಬುದು ನಮ್ಮ ನಿಲುವು. ನಿರ್ದಿಷ್ಟ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಮಹಿಳೆಯರಿಗೆ ಸೌಲಭ್ಯಗಳನ್ನು ನಿರಾಕರಿಸಬಾರದು’ ಎಂದು ಹೇಳಿದ್ದಾರೆ.

Source : Udayavani

1 hour ago

Home Flash News